ಅದೇ ಕಥೆ

ಆಡುಗೂಲಜ್ಜಿ ಕಣ್ಣುಮುಚ್ಚಿ ಹೇಳುತ್ತಾಳೆ ಕಥೆಯ,
ನೇಯುತ್ತಾಳೆ ರಾಗವಾಗಿ ವರ್ತಮಾನ ವ್ಯಥೆಯಾಗುವ
ಸತ್ತ ಸುಖದ ಸ್ಮೃತಿಯ.
ಕಣ್ಣಿಂದ ದಳದಳ ನೀರು
ಹೆಪ್ಪುಮುಪ್ಪಿನ ಸುಕ್ಕುತೆರೆ ಸರಿಸಿ ಮುಖದಲ್ಲಿ
ಏಳುವುವು ನೂರು
ಜೇನುಗೂಡನು ಹಿಂಡಿಬಂದ ಅನುಭವ ಸಾಲು:
“ಅಯ್ಯೋ ದೇವರೆ ಆಗೆಲ್ಲ ಎಂಥ ಕಾಲ!
ಎಂಥ ಬಾಲ ಕಪ್ಪೆಗೆ, ಏನು ಕೋಡು ಕುದುರೆಗೆ
ಅರಳಿಯೆಲೆಯ ಕೆಂಪುಚಿಗುರೆ ಮೇವು ಹಂಸಪಕ್ಷಿಗೆ;
ಬೇಲಿಯಿರದ ಬೇಟ
ಕಾವಲಿರದ ತೋಟ
ದನಕಾಯುವ ದಡ್ಡ ಕೂಡ ತಪ್ಪಿ ಮೇಲೆ ಕೂತರೆ
ತಟಕ್ಕನೆಯೆ ಜೀವತುಂಬಿ ನುಡಿವ ಧರ್ಮಪೀಠ;
ಎಂಥ ಕೆಟ್ಟ ಹೆಣ್ಣಿಗೂ ಸರಸ್ವತಿಯ ಕಂಠ
ಅಪ್ಸರೆಯರ ಸೊಂಟ
ಗಂಡಸಾದರಂತು ಬಿಡು ಇಂದ್ರ ಅವನ ನೆಂಟ”.
ಹರಿಹರಿದಂತೆ ನೆರೆ ಬರುವುದು
ಕೊರಕಲಿನಲ್ಲಿ ಕಿಳಪಿಳ ಸರಿವ ಬಡಕಲು ತೊರೆಗೆ;
ಬಿಟ್ಟ ಬಾಯಾಗಿ
ನೆಟ್ಟ ಕಣ್ಣಾಗಿ
ಕೇಳುವುವು ಮಕ್ಕಳು
ಆತು ಅಜ್ಜಿ ಮೈಗೆ,
ಬೆರಗಾಗಿ ಕತ್ತಲಲ್ಲಿ ಕುರುಡ ಬಣ್ಣಿಸುತ್ತಿರುವ
ಬೆಳುದಿಂಗಳ ಕಥೆಗೆ.

ನಮಗೇನು ಗೊತ್ತು
ಹೋಮಧೂಮದಲಿ ಬುದ್ಧಪ್ರೇಮದಲಿ
ಅಶೋಕಧರ್ಮದ ಚಕ್ರಚಲನದಲಿ
ಗಾಡಿ ನಡೆದ ಗತ್ತು?
ಮನೆಯಿತ್ತು
ಮನೆಗೆ ಮಾಡಿತ್ತು;
ಹೆಂಚುದೋಣಿಗಳ ನಡುವೆ ಅಲ್ಲಲ್ಲಿ ತೂತೂ ಇತ್ತು;
ಹಗಲಲ್ಲಿ ಹೊನ್ನ ಸರಳು
ಇರುಳಲ್ಲಿ ಬೆಳುದಿಂಗಳ ಕೊರಳು
ದೇವರ ಮನೆಗೆ ಬೆಳಕ ಹಾಡಿತ್ತು.
ಮಳೆಗಾಲದಲ್ಲಿ ಮನೆ ಕೆರೆಯಾಗಿರಲಿಲ್ಲವೆ,
ಬೆಲ್ಲದ ವರ್ಣನೆಯಲ್ಲೇ ಬೇವಿನ ಮಾಹಿತಿ ಇಲ್ಲವೆ?
ಎದ್ದ ಕಲ್ಲು ಪೂಜಾರಿಯ ಲೆಕ್ಕಕ್ಕೆ ಜಮವಾಗಿ
ಜಾಗಟೆ ಮೊಳಗಿ
ಆರತಿ ಬೆಳಗಿ ಗುಡಿಯಲ್ಲಿ,
ಬಿದ್ದ ಕಲ್ಲುಗಳ ಪಾಡು
ಅಗಸನ ಬಟ್ಟೆಯ ಬಡಿತದ ತಾಳಕೆ ನುಡಿಸಿದ ಹಾಡು!

ಇತ್ತು ಆಗಲೂ ಎಲ್ಲ ಇತ್ತು
ಅಜ್ಜಿಯ ಹಾಡಿನ ಮಲ್ಲಿಗೆ ಜಾಡಿನ ತಳದ ಕೆದಕಿನಲಿ
ಮೂಳೆ ಮಜ್ಜೆಗಳ ನಾರುವ ಗೊಬ್ಬರವಿತ್ತು
ಕರ್ಣನ ಶೌರ್ಯ
ಧರ್ಮನ ಧೈರ್ಯ
ಅಂಬೆಯ ಪ್ರೀತಿ
ಭೀಷ್ಮನ ನೀತಿ
ಎಲ್ಲಕು ಕೂಡಿಯೆ
ಕಾಲಜ್ಞಾನದ ಕತ್ತಲ ಕೊಳದಲಿ ಕಾಲುಜಾರಿತ್ತು.

ಆ ವನದಿಂದಲೆ ತಂದುದು ಈ ಆಲದ ಸಸಿಯ
ಬಳಿಯಬಹುದೆ ನಾವು ಪರಂಪರೆಯ ಮುಖಕೆ ಮಸಿಯ?
ಅಳಿಸಬಹುದೆ ನಿನ್ನೆಯಿಂದ ಇಂದು ಬಂದ ನನ್ನಿಯ?
ಹಾಗೆಂದೇ ಇಂದು ಕೂಡ
ಮಕ್ಕಳಿರುವ ಮನೆನೆತ್ತಿಯ ಮೇಲೆ ಗೂಬೆ ಕೂಗಿದೆ
ತೆಂಗುಗರಿಯ ಮೇಲೆ ಮಂಗ ಕುಣಿದು ಲಾಗ ಹಾಕಿದೆ
ಕಣಜದಲ್ಲೆ ಹೆಗ್ಗಣ
ಅಡಿಗೆಮನೆ ಮದ್ದಿನ
ದೀಪಾವಳಿ ಷಾಪಾಗಿದೆ, ಹೊಂಚುತ್ತಿದೆ ದುರ್ದಿನ?

ಬಿದ್ದಮನೆ ಗುರುತಲ್ಲೆ ಹೊಸಮನೆಗೆ ಅಡಿಪಾಯ
ಆಗೆಯುತ್ತಿದ್ದೇವೆ;
ಹುತ್ತ ಕಂಡೊಡನೆಯೇ ಹಾವಾಗಿ
ನೀರು ಕಂಡೊಡನೆಯೇ ಹೊಳೆಯಾಗಿ
ಎತ್ತಿಟ್ಟಕಾಲ ಮುತ್ತಿಟ್ಟದರ ಮೆಟ್ಟಾಗಿ
ಹೊಟ್ಟಾಗಿ ಈ ಕೆಟ್ಟ ಹೊಟ್ಟೆ ಹೊರೆದಿದ್ದೇವೆ;
ತಿದ್ದ ಬಂದವರನ್ನು ಗುದ್ದಿ ತೆಗೆದಿದ್ದೇವೆ
ಪ್ರತಿಕ್ಷಣವು ಅದಕೆ ಕೊರಗುತ್ತಲೂ ಇದ್ದೇವೆ;
ಕಷ್ಟ ಉಳಿದರು ಕಡೆಗೆ ನಾವು ಮುಗಿಯುವೆವೆಂದು
ಕತ್ತಲೆಯನೇ ನೆಮ್ಮಿ
ನಡೆಯುತ್ತಿದ್ದೇವೆ
ನಡೆಯುತ್ತಿರುತ್ತೇವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಹಿ
Next post ಕೇಳು ಎದೆಯ ಪ್ರೇಮ ಕವನ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys